Thursday 12 June 2014

ಆಶಯ



ಆಶಯ
ಭಾವ ಶರದಿ ಉಕ್ಕುಕ್ಕುವ ಪರಿ
ನಾನೆಂತು ಬಣ್ಣಿಸಲಿ
ಅಷ್ಟ ದೃಕ್ಪಥದಲಿ ಮಾರ್ದನಿಪ ದನಿ
ಒಡಲಾಳದ ಉರಿಯ ತಣಿಸಲಿ

ಭರತ ಉಬ್ಬರಿಸಿ ಮೊರೆದು
ಅಬ್ಬರಿಸಿ ಬೊಬ್ಬರಿಯಲಿ
ಜಲಪಾತ ಭೋರ್ಗರೆದು ಸುರಿದು
ಪ್ರಶಾಂತ ಹಾಸ ಬೀರಲಿ

ವೇದ ಮಂತ್ರಗಳ ತಾರಕ
ದಿಗ್​ದಿಗಂತಕೆ ಏರಲಿ
ಸಮ್ಮೋಹಿತ ಮಧುರ ಗಾನ ಝಲಕು
ಸ್ವರವೇ ರಿಂಗಣಿಸಲಿ

ಭುವಿಯೆ ಬಾಯ್ಬಿಟ್ಟು ಉಗುಳಿ
ಲಾವಾರಸವೇ ಹರಿಯಲಿ
ಹೆಪ್ಪುಗಟ್ಟುವ ನೆಲದಿ
ಹಸಿರು ಪತ್ತಲ ಚಿಗುರಲಿ

ಇಂದ್ರ ದಿಕ್ಪಾಲಕರೆ ಮುನಿದು
ಅಗ್ನಿಯ ಮಳೆಗರೆಯಲಿ
ಭುವನ ಭಾಗೀರತಿಯ ಶೀಲ
ಸ್ವಚ್ಛ ಸಾಬೀತುಗೊಳ್ಳಲಿ

ಗತದ ಕಾಲವೇ ತಿರುಗಿ
ವರ್ತಮಾನದಿ ನಿಲ್ಲಲಿ
ಅಣುರೇಣು ತೃಣ ಕಾಷ್ಠಗಳೊಡತಿ
ಸರ್ವಶಕ್ತೆಯ ಮಹಿಮೆ ಸಾರಲಿ
                                                                -ವಿಪ್ರವಿಶ್ವತ್ (ವಿಶ್ವಾಸ್ ಭಾರದ್ವಾಜ್

No comments:

Post a Comment